ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು”
ಚಿಕ್ಕೋಡಿ: ಸಾವಯವ ಕೃಷಿಗೆ ಉತ್ತೇಜಿಸುವ ಸಲುವಾಗಿ ಮಹಾರಾಷ್ಟ್ರದ ಕನ್ನೇರಿ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಸಾವಯವ ಕೃಷಿ ಪರಿವಾರ ಮತ್ತು ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮಸ್್ರ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಜ.12, 13 ರಂದು. `ಭೂತಾಯಿಯ ರಕ್ಷಣೆಗೆ ಸಂತರು, ರೈತರ ಮಹಾಸಮಾವೇಶ ಎಂಬ ಶಿರ್ಷಿಕೆಯಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ನೇರಿಯ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸೋಮವಾರ ಇಲ್ಲಿನ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಜೇಷ್ಠ ಸಾಧು-ಸಂತರು, ಧರ್ಮದಶಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸುವ ಮಹನೀಯರು ಸಾವಯವ ಕೃಷಿ, ಗ್ರಾಮೀಣ ಜೀವನ ಸುಧಾರಣೆ, ಗೋವುಗಳ ಸರಂಕ್ಷಣೆ, ಪರಿಸರ ಮುಂತಾದ ವಿಷಯಗಳ ಅನುಷ್ಠಾನದಲ್ಲಿ ಒಕ್ಕೊರಲಿನ ಧ್ವನಿ ಆಲಿಸುವ ಆಶಯವೇ ಈ ಸಮಾವೇಶದ ಮೂಲ
ಉದ್ದೇಶವಾಗಿದೆ ಎಂದರು. ಈ ಸಮಾವೇಶದಲ್ಲಿ ‘ವಿನಾಶದ ಅಂಚಿನಲ್ಲಿರುವ
ಭೂಮಿಯನ್ನು ರಕ್ಷಣೆ ಮಾಡಿ ಈ ನೆಲದ ಮಣ್ಣು ವಿಷಕಾರಿಯಾಗಿರುವುದನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಪ್ರಾತ್ಯಕ್ಷಿಕೆಗಳ ಜೊತೆಗೆ ಸಾಧು- ಸಂತರು, ರೈತರು ಇದರ ಬಗ್ಗೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದರು.
ಹೆಚ್ಚು ಇಳುವರಿ ತೆಗೆಯುವ ಮಹದಾಸೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ವಿಷಕಾರಿಯಾಗುತ್ತಿರುವುದನ್ನು ತಡೆಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಅಲ್ಲದೇ ಸಾವಯವ ಕೃಷಿ ಮಾಡಿದ ರೈತರಿಗೆ ಮಠಗಳು ಮಾರುಕಟ್ಟೆಯನ್ನು ಒದಗಿಸಲು ಮುಂದಾಗಬೇಕಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ಮಠಾಧಿಶರು ಹಾಗೂ ಕೃಷಿಕರು ಸಾಕಷ್ಟು ಸಾವಯವ ಕೃಷಿಯನ್ನು ಕೈಗೊಂಡಿದ್ದಾರೆ. ಇದೀಗ ಮತ್ತೇ ನಾವೂ ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಂದಿಪುರ ಮಠದ ಡಾ. ಮಹೇಶ್ವರ ಸ್ವಾಮೀಜಿ, ಬಳ್ಳಾರಿ – ಕಲ್ಯಾಣಿ ಮಹಾಸ್ವಾಮೀಜಿ, ಹರಡನಹಳ್ಳಿ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಜಿ, ಯಾದಗಿರಿಯ ಗಿರಿಮಲ್ಲೇಶ್ವರ ಸ್ವಾಮೀಜಿ, ಮುಧೋಳದ ಶಂಕರಾರೂಢ ಮಹಾಸ್ವಾಮಿಗಳು, ಕೃಷ್ಣಾನಂದ ಮಹಾಸ್ವಾಮೀಜಿ, ಆನಂದ, ಆರ್.ಟಿ.ಪಾಟೀಲ, ಸಾವಯವ ಕೃಷಿ ಪರಿವಾರದ ಅಧ್ಯಕ್ಷ ದತ್ತಾತ್ರೇಯ ರಾಮಚಂದ್ರ ಹೆಗಡೆ, ದುಂಡಪ್ಪಾ ಬೆಂಡವಾಡೆ ಉಪಸ್ಥಿತರಿದ್ದರು.
+ There are no comments
Add yours